- ಸದ್ಯದಲ್ಲೇ ತೆರೆಮೇಲೆ ಕಾಣಿಸಿಕೊಳ್ಳಲಿದೆ ಕರಾವಳಿಯ ಬಹುಭಾಷಾ ಚಿತ್ರ “ಕೊರಗಜ್ಜ”
- ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸುಧೀರ ಅತ್ತಾವರ ಅವರ ನಿರ್ದೇಶನವಿದೆ.
- 800 ವರ್ಷಗಳ ಹಿಂದಿನ ಕತೆ ಹೇಳಲಿದೆ ಈ ಸಿನಿಮಾ
ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಲೇಖಕ ಸುಧೀರ್ ಅತ್ತಾವರ ನಿರ್ದೇಶನವಿರುವ ಬಹುಭಾಷಾ ಚಿತ್ರ “ಕೊರಗಜ್ಜ” Koragajja Movie ಚಿತ್ರೀಕರಣ ಮುಗಿಸಿದ್ದು, ಬಿಡುಗಡೆಗೆ ಸಜ್ಜಾಗಿದೆ. ಸ್ಯಾಂಡಲ್ವುಡ್ನ ಬಹುನಿರೀಕ್ಷಿತ ಮತ್ತು ತುಳುನಾಡ ಆರಾಧ್ಯ ದೈವ ಕೊರಗಜ್ಜನ ಕಥೆಯನ್ನು ಒಳಗೊಂಡ ಚಿತ್ರ ಇದಾಗಿದೆ.
ತುಳುನಾಡ ಆರಾಧ್ಯ ದೈವ
ಕರ್ನಾಟಕದ ಕರಾವಳಿ ಅದರಲ್ಲೂ ತುಳುನಾಡು ಪ್ರದೇಶದಲ್ಲಿ ದೈವಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಪ್ರತೀ ಮನೆತನಗಳಿಗೂ ಅವರದ್ದೇ ಆದ ದೈವ, ದೈವಸ್ಥಾನಗಳಿವೆ. ನೇಮ, ಕೋಲ ಮುಂತಾದ ಆಚರಣೆಗಳು ಭಯ, ಭಕ್ತಿಯಿಂದ ನಡೆಯುತ್ತವೆ. ಇಂತಹ ಪ್ರಮುಖ ದೈವಗಳಲ್ಲೊಂದು ಕೊರಗಜ್ಜ. ಕೊರಗಜ್ಜನ ಕತೆಯನ್ನು ಬೆಳ್ಳಿ ಪರದೆ ಮೇಲೆ ತರುತ್ತಿದೆ ಚಿತ್ರತಂಡ. ಕೇರಳದ ಪೂಜ್ಯ ದೇವತೆ ಮುತ್ತಪ್ಪನ್ ನ ದಂತಕಥೆಯೊಂದಿಗೆ ಕೊರಗಜ್ಜನ ಕತೆಯು ಸಮಾನಾಂತರವಾಗಿದೆ ಎಂಬೂ ಹೇಳಲಾಗುತ್ತದೆ. ಸುಮಾರು 800 ವರ್ಷಗಳ ಹಿಂದಿನ ಕತೆಯನ್ನು ಈ ಚಿತ್ರದಲ್ಲಿಹೇಳಲಾಗಿದೆ. ಚಿತ್ರದಲ್ಲಿ ಭೂತ ಕೋಲ ಸೇರಿದಂತೆ ಸ್ಥಳೀಯ ಸಂಪ್ರದಾಯ ಮತ್ತು ಜಾನಪದದ ಆಚರಣೆಗಳನ್ನು ಜನರಿಗೆ ಅರ್ಥವಾಗುವಂತೆ ಬಿಂಬಿಸಲಾಗಿದೆ.

ಪ್ರಮುಖ ಪಾತ್ರದಲ್ಲಿ ಕಬೀರ್ ಬೇಡಿ
ಕೊರಗಜ್ಜ ಚಿತ್ರದಲ್ಲಿ ಬಾಲಿವುಡ್ ನಟ ಕಬೀರ್ ಬೇಡಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತಾರಾಗಣದಲ್ಲಿ ಭವ್ಯ, ಸಂದೀಪ್ ಸೋಪರ್ಕರ್, ಗಣೇಶ್ ಆಚಾರ್ಯ, ಶ್ರುತಿ ಹರಿಹರನ್ ಮತ್ತು ನವೀನ್ ಡಿ ಪಡೀಲ್ ಇದ್ದಾರೆ. ಚಿತ್ರಕ್ಕೆ ಮನೋಜ್ ಪಿಳ್ಳೈ ಅವರ ಛಾಯಾಗ್ರಹಣ, ಗೋಪಿ ಸುಂದರ್ ಅವರ ಸಂಗೀತ ಸಂಯೋಜನೆ ಮತ್ತು ಜಿತ್ ಜೋಷಿ ಮತ್ತು ವಿದ್ಯಾಧರ್ ಶೆಟ್ಟಿಯವರ ಸಂಕಲನವಿದೆ. ಸಕ್ಸಸ್ ಫಿಲಂಸ್ ಮತ್ತು ತ್ರಿವಿಕ್ರಮ್ ಸಿನಿಮಾಸ್ ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರವು ತುಳು, ಮಲಯಾಳಂ, ತಮಿಳು, ತೆಲುಗು ಮತ್ತು ಹಿಂದಿ ಸೇರಿ ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.