- “ನಾಗಬಂಧಂ” ವಿರಾಟ್ ಕರ್ಣನ “ರುದ್ರ”ರೂಪ ಅನಾವರಣ
- ಅಭಿಷೇಕ್ ನಾಮಾ ಕಥೆ, ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ “ನಾಗಬಂಧಂ”
- ಚಿತ್ರದಲ್ಲಿ ರುದ್ರನ ಪಾತ್ರದಲ್ಲಿ ಮಿಂಚುತ್ತಿದ್ದಾರೆ ಯುವ ನಾಯಕ ವಿರಾಟ್ ಕರ್ಣ
- ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಗೊಳಿಸಿದ ರಾಣಾ ದಗ್ಗುಬಾಟಿ
ಅನಂತ ಪದ್ಮನಾಭಸ್ವಾಮಿ ಮತ್ತು ಪುರಿ ಜಗನ್ನಾಥ ದೇವಾಲಯಗಳಲ್ಲಿ ಪತ್ತೆಯಾದ ನಿಧಿ ಆಧಾರಿತ ಕಾಲ್ಪನಿಕ ಕಥೆಯೇ “ನಾಗಬಂಧಂ” Nagabandham Movie ಮೂವಿಯ ಕಥಾಹಂದರವಾಗಿದ್ದು, “ನಾಗಬಂಧಂ- ದಿ ಸೀಕ್ರೆಟ್ ಟ್ರೆಷರ್” ಚಿತ್ರಕ್ಕೆ ಅಭಿಷೇಕ್ ನಾಮಾ ಆಕ್ಷನ್ ಕಟ್ ಹೇಳೀದ್ದಾರೆ. ಕೆಲವು ಸಮಯಗಳ ಹಿಂದೆ ಚಿತ್ರದ ಪ್ರಿ-ಲುಕ್ ಪೋಸ್ಟರ್ ಅನಾವರಣಗೊಂಡಿದ್ದು, ಸಿನಿಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿತ್ತು. ಇದೀಗ ಚಿತ್ರದ ನಾಯಕ ನಟ ವಿರಾಟ್ ಕರ್ಣ ನ Virat Karna ರುದ್ರ ಪಾತ್ರದ ಫರ್ಸ್ಟ್ ಲುಕ್ ಪೋಸ್ಟರ್ ರಿವೀಲ್ ಮಾಡಿದ್ದು, ಪ್ಯಾನ್ ಇಂಡಿಯಾ ಸಿನಿಮಾದ ಕುರಿತು ನಿರೀಕ್ಷೆ ಇನ್ನಷ್ಟು ಹೆಚ್ಚಾಗಿದೆ.

ಹೀಗಿದೆ ರುದ್ರಾವತಾರ…!
ಗುಂಗುರು ಕೂದಲು, ಕುರುಚಲು ಗಡ್ಡ, ಸಿಕ್ಸ್ ಪ್ಯಾಕ್ ನಲ್ಲಿ ಗಮನ ಸೆಳೆಯುವ ರುದ್ರ ಪಾತ್ರಧಾರಿ ವಿರಾಟ್ ಕರ್ಣ ಪೋಸ್ಟರ್ ನಲ್ಲಿ ರುದ್ರನಾಗಿ ಉಗ್ರಾವತಾರ ತಳೆದಿದ್ದಾರೆ. ಮೊಸಳೆಯ ಬಾಯಿಯನ್ನು ಸೀಳಿ, ರುದ್ರನ ಪೌರುಷ ಅನಾವರಣವಾಗಿದೆ. ಈ ಚಿತ್ರದ ಮೂಲಕ ನಿರ್ದೇಶಕರು ಭಾರತದ ಪ್ರಾಚೀನ ವಿಷ್ಣು ದೇವಾಲಯಗಳ ಗುಪ್ತ ರಹಸ್ಯಗಳ ಕತೆ ತೆರೆದಿಡಲಿದ್ದಾರೆ. ಭಾರತದಲ್ಲಿನ 108 ವಿಷ್ಣು ದೇವಾಲಯಗಳ ಸುತ್ತಲಿನ ರಹಸ್ಯವನ್ನು, ಆ ನಿಧಿಯನ್ನು ಸರ್ಪಗಳು ರಕ್ಷಿಸುತ್ತಿವೆ ಎಂಬ ನಂಬಿಕೆಯ ಹಿನ್ನೆಲೆಯ ಕಥೆಯೂ ಇದರ ಕಥಾ ಎಳೆಯಾಗಿದೆ.
ಚಿತ್ರ ನಿರ್ಮಾಣದ ಹಿಂದಿದೆ ಇವರ ಕೈಚಳಕ
ಅಭಿಷೇಕ್ ಪಿಕ್ಚರ್ಸ್ ಸಹಯೋಗದಲ್ಲಿ ಎನ್ಐಕೆ ಸ್ಟುಡಿಯೋಸ್ ಬ್ಯಾನರ್ನಲ್ಲಿ ಕಿಶೋರ್ ಅನ್ನಪುರೆಡ್ಡಿ ಮತ್ತು ತಾರಕ್ ಸಿನಿಮಾಸ್ ಜೊತೆಯಾಗಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಲಕ್ಷ್ಮಿ ಇರಾ ಮತ್ತು ದೇವಾಂಶ್ ನಾಮಾ ಈ ಚಿತ್ರವನ್ನು ಪ್ರಸ್ತುತಪಡಿಸುತ್ತಿದ್ದಾರೆ. ಕನ್ನಡದ ತಾರೆ ನಭಾ ನಟೇಶ್ ಮತ್ತು ಈಶ್ವರ್ಯ ಮೆನನ್ ನಾಯಕಿಯರಾಗಿ ನಟಿಸಿದ್ದಾರೆ. ಪಾತ್ರವರ್ಗದಲ್ಲಿ ಜಗಪತಿ ಬಾಬು, ಜಯಪ್ರಕಾಶ್, ಮುರಳಿ ಶರ್ಮಾ, ಅವಿನಾಶ್ ಅಘೋರಿ ಮುಂತಾದವರಿದ್ದಾರೆ. ಸೌಂದರ್ ರಾಜನ್ ಎಸ್ ಕ್ಯಾಮರಾಮನ್ ಆಗಿದ್ದು, ಅಭೆ ಸಂಗೀತ ನೀಡಿದ್ದಾರೆ. ಕಲ್ಯಾಣ್ ಚಕ್ರವರ್ತಿ ಸಂಭಾಷಣೆ ಬರೆದಿದ್ದು, ಸಂತೋಷ್ ಕಾಮಿರೆಡ್ಡಿ ಸಂಕಲನ ಮಾಡಿದ್ದಾರೆ. ಅಶೋಕ್ ಕುಮಾರ್ ಪ್ರೊಡಕ್ಷನ್ ಡಿಸೈನರ್ ಆಗಿದ್ದಾರೆ. 100 ಕೋಟಿ ಬಜೆಟ್ ನಲ್ಲಿ ನಿರ್ಮಾಣವಾಗುತ್ತಿರುವ ಭರ್ಜರಿ ಸಿನಿಮಾ ಇದಾಗಿದ್ದು ಇದೇ ವರ್ಷ ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆ ಆಗಲಿದೆ.