- ಬಿಗ್ ಬಾಸ್ ಗೆ ಕಿಚ್ಚ ಸುದೀಪ್ ಗುಡ್ ಬೈ; ಏನಿದರ ಹಿಂದಿನ ರಹಸ್ಯ
- ಬಿಗ್ ಬಾಸ್ ಗೆ ಶೋಭೆ ತಂದುಕೊಟ್ಟಿರುವ ಸುದೀಪ್ ಇಷ್ಟು ಯಶಸ್ವಿ ಎಪಿಸೋಡ್ ಗಳ ನಂತರ ಬಿಗ್ ಬಾಸ್ ಬಿಡುವ ನಿರ್ಧಾರ ಮಾಡಿರುವುದರ ಹಿಂದಿನ ಕಥೆಯೇನು?
ಕನ್ನಡದ ಬಿಗ್ ಬಾಸ್ ಗೆ ಕಿಚ್ಚ ಸುದೀಪ್ Kiccha Sudeep ಒಂದು ರೀತಿಯ ಶೋಭೆ ತಂದುಕೊಟ್ಟಿದ್ದಾರೆ. ಬಿಗ್ ಬಾಸ್ Bigg Boss Kannada ಮನೆಯ ಒಳಗಿನ ಕತೆಗಳನ್ನು ನೋಡುವುದಕ್ಕಿಂತ ಸುದೀಪ್ ನ ಮಾತು ಕೇಳಲಿಕ್ಕೆಂದೇ ವಾರಾಂತ್ಯಗಳಲ್ಲಿ ಬಿಗ್ ಬಾಸ್ ನೋಡುವವರು ಬಹಳಷ್ಟು ಜನರಿದ್ದಾರೆ. ಆದರೆ ಇತ್ತೀಚೆಗಷ್ಟೇ ಸುದೀಪ್ ರವರು ಇನ್ನು ಬಿಗ್ ಬಾಸ್ ನಿರೂಪಣೆ ಮಾಡುವುದಿಲ್ಲ ಎಂದು ಟ್ವೀಟ್ ಮಾಡಿದ್ದು ಬಹುದೊಡ್ಡ ಚರ್ಚೆಯ ವಿಷಯವಾಗಿತ್ತು. ಹಾಗೇ ಸುದೀಪ್ ನಷ್ಟು ಸಮರ್ಥವಾಗಿ ಈ ಷೋ ನಡೆಸುವವರು ಸಿಗುವುದು ಕಷ್ಟ ಎಂಬ ಮಾತುಗಳೂ ಹರಿದಾಡುತ್ತಿದ್ದವು. ಇಷ್ಟು ದೊಡ್ಡ ಶಾಕ್ ನ ಹಿಂದಿನ ಕಾರಣಗಳೇನು ಅನ್ನೋದನ್ನ ಸುದೀಪ್ ರವರು ಇದೀಗ ಹಂಚಿಕೊಂಡಿದ್ದಾರೆ.
ಈ ನಿರ್ಧಾರದ ಹಿಂದಿನ ಕಾರಣವೇನು
ಸುದೀಪ್ ಕಾರಣದಿಂದಲೇ ಬಹುದೊಡ್ಡ ವೀಕ್ಷಕರನ್ನು ಹೊಂದಿರುವ ಈ ಷೋದ ಪ್ರಸ್ತುತ ನಡೆಯುತ್ತಿರುವ ಹನ್ನೊಂದನೇ ಎಪಿಸೋಡ್ ಸುದೀಪ್ ರವರ ಕೊನೆಯ ಎಪಿಸೋಡ್ ಆಗಲು ಕಾರಣವೇನು ಅನ್ನೋದನ್ನು ಅವರು ಮಾಕ್ಸ್ ಚಿತ್ರದ Max Movie ಪ್ರಚಾರದ ಕುರಿತು ದಿ ಹಿಂದೂ ಪತ್ರಿಕೆಗೆ ನೀಡಿರುವ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.
“ಬಿಗ್ ಬಾಸ್ ಗೆ ನಾನು ಪ್ರತಿವಾರವೂ ಸಮಯ ಮೀಸಲಿಡಲೇಬೇಕು, ನಾನು ಬೇರೆಲ್ಲೇ ಶೂಟಿಂಗ್ ನಲ್ಲಿ ಬ್ಯುಸಿ ಇದ್ದರೂ ಶನಿವಾರ ಬಿಗ್ ಬಾಸ್ ಶೂಟಿಂಗ್ ಗೆ ರೆಡಿಯಾಗಲೇಬೇಕು. ನನಗೆ ವಾರದ ಎಲ್ಲಾ ದಿನದ ಎಪಿಸೋಡ್ ಗಳನ್ನು ನೋಡದೇ ಸುಮ್ಮನೇ ಮಾತನಾಡುವುದು ಇಷ್ಟವಾಗುವುದಿಲ್ಲ. ಹಾಗಾಗಿ ಪ್ರಯಾಣ ಮಾಡಿ ಬಂದು ದಣಿದಿದ್ದರೂ ಕೂಡಾ ಶುಕ್ರವಾರ ಎಲ್ಲಾ ಎಪಿಸೋಡ್ ಗಳನ್ನೂ ನೋಡಿ ತಯಾರಿ ನಡೆಸಬೇಕಾಗುತ್ತದೆ. ಇದು ನನ್ನಿಂದ ಹೆಚ್ಚು ಪರಿಶ್ರಮ ಬೇಡುವ ಕೆಲಸ. ಆ ಶ್ರಮಕ್ಜೆ ತಕ್ಕನಾದ ಬೆಲೆ ನೀಡುವುದನ್ನು ಸಹಜವಾಗಿ ನಿರೀಕ್ಷಿಸುತ್ತೇನೆ, ಬೆಲೆ ಸಿಗದಿದ್ದರೆ ಇದೇ ಶ್ರಮವನ್ನು ಫಿಲಂಗೆ ಹಾಕಲು ಇಚ್ಛಿಸುತ್ತೇನೆ. ಇತರ ಭಾಷೆಗಳಲ್ಲಿ ಬಿಗ್ ಬಾಸ್ ಷೋ ಗೆ ದೊರೆಯುತ್ತಿರುವ ಮನ್ನಣೆ ಕನ್ನಡದಲ್ಲೂ ಸಿಗಬೇಕು. ಈಗ ಆ ಮನ್ನಣೆ ಸಿಗುತ್ತಿದೆ ಎಂದು ನನಗೆ ಅನ್ನಿಸುತ್ತಿಲ್ಲ. ಮತ್ತು ನನಗಿಂತ ಇನ್ನೂ ಚೆನ್ನಾಗಿ ನಿರೂಪಣೆ ಮಾಡುವವರು ಖಂಡಿತಾ ಸಿಕ್ಕೇ ಸಿಗುತ್ತಾರೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆಯಾಗಿ ಇಲ್ಲಿನವರೆಗಿನ ಹನ್ನೊಂದು ಷೋಗಳನ್ನೂ ಯಶಸ್ವಿಯಾಗಿ ನಡೆಸಿಕೊಟ್ಟ ಕಿಚ್ಚ ಸುದೀಪ್ ಬಿಗ್ ಬಾಸ್ ನಿಂದ ಹೊರನಡೆಯುತ್ತಿರುವುದು ಅಭಿಮಾನಿಗಳಿಗೆ ನೋವುಂಟಾಗಿದೆ. ಬೇರೆ ಯಾರೂ ಆ ಸ್ಥಾನವನ್ನು ತುಂಬಲು ಸಾಧ್ಯವಿಲ್ಲ ಎಂಬ ಮಾತುಗಳೂ ಕೇಳಿಬರುತ್ತಿವೆ. ಅದರೊಂದಿಗೆ ಸುದೀಪ್ ನಿರೂಪಣೆ ಬಿಡುವಲ್ಲಿ ಇನ್ ಸೈಡ್ ಅಜೆಂಡಾ ಕೂಡಾ ಇದೆ ಎಂದೂ ಅವರು ತಿಳಿಸಿದ್ದಾರೆ.