- “ಕಾಂತಾರ: ಚಾಪ್ಟರ್ 1”; ಕನ್ನಡ ಸಿನಿರಂಗಕ್ಕೆ ಕೊಟ್ಟಿತು ಹೊಸ ಮೆರಗು
- ಅದ್ಬುತ ಕತೆ-ದೃಶ್ಯಕಾವ್ಯ ಇರೋ ಚಿತ್ರಕ್ಕೆ ಎಲ್ಲೆಡೆ ಭರ್ಜರಿ ರೆಸ್ಪಾನ್ಸ್
- ಪ್ರೇಕ್ಷಕರೊಳಗೆ ಹೊಸ ಮಾಯಾಲೋಕ ಮೂಡಿಸಿದ ಗ್ರ್ಯಾಂಡ್ ಸಿನಿಮಾ
ಕನ್ನಡದ ಜನಪ್ರಿಯ ನಟ-ನಿರ್ದೇಶಕ ರಿಷಬ್ ಶೆಟ್ಟಿಯವರ Rishabh Shetty ಬಹುನಿರೀಕ್ಷಿತ ಚಿತ್ರ “ಕಾಂತಾರ: ಚಾಪ್ಟರ್ 1” ಇದೀಗ ತೆರೆಗೆ ಅಪ್ಪಳಿಸಿದ್ದು, ಪ್ರೀಮಿಯರ್ ಷೋ ಗಳಲ್ಲಿ ಚಿತ್ರಕ್ಕೆ ಭರ್ಜರಿ ಪ್ರತಿಕ್ರಿಯೆ ದೊರೆತಿದೆ. ಬಿಡುಗಡೆಯ ಮೊದಲ ದಿನವೇ ಪ್ರೇಕ್ಷಕರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದು, ಚಿತ್ರದ ಆಡಂಭರ ಹಾಗೂ ಕಲಾತ್ಮಕ ದೃಶ್ಯಗಳ ಕುರಿತು ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಸೆಳೆಯಿತು ಕಾಲಯಾನದ ಕಥೆ
“ಕಾಂತಾರ” Kanthara ಚಿತ್ರ ಪ್ರಸ್ತುತ ಕಾಲಘಟ್ಟದ ಕಥಾಹಂದರ ಹೊಂದಿತ್ತು, ಆದರೆ “ಕಾಂತಾರ ಚಾಪ್ಟರ್ 1” ರಲ್ಲಿ ಈ ಬಾರಿ ರಿಷಬ್ ಶೆಟ್ಟಿ ಪ್ರೇಕ್ಷಕರನ್ನು ಕ್ರಿ.ಶ. 4-5ನೇ ಶತಮಾನಕ್ಕೆ ಕರೆದುಕೊಂಡು ಹೋಗುತ್ತಾರೆ. ಕದಂಬರ ಆಳ್ವಿಕೆ ಕಾಲವನ್ನು ಹಿನ್ನೆಲೆಯಾಗಿ ಇಟ್ಟುಕೊಂಡ ಈ ಪ್ರೀಕ್ವೇಲ್ನಲ್ಲಿ, ರಾಜ ಮನೆತನ ಮತ್ತು ಈಶ್ವರ ಹೂದೋಟದ ಜನರ ನಡುವೆ ಉಂಟಾಗುವ ಸಂಘರ್ಷವಿದೆ. ಈ ಕತೆಯಲ್ಲಿ ಬೇರೆಯೇ ಹೊಸ ಲೋಕವೊಂದನ್ನು ಕಟ್ಟಿಕೊಡಲಾಗಿದೆ.
ಅದ್ಬುತ ನಟನೆಗೆ ಪ್ರೇಕ್ಷಕರಿಂದ ಬಹುಪರಾಕ್
ಚಿತ್ರದಲ್ಲಿ ರಿಷಬ್ ಶೆಟ್ಟಿ ಬೆರ್ಮೆ ಪಾತ್ರದಲ್ಲಿ ತಮ್ಮ ಶೌರ್ಯವನ್ನು ತೋರಿಸಿದ್ದು, ಆಕ್ಷನ್ ಹಾಗೂ ಭಾವನಾತ್ಮಕ ಸನ್ನಿವೇಶಗಳಲ್ಲಿ ಡಿಫರೆಂಟ್ ಫೀಲ್ ಕೊಟ್ಟಿದ್ದಾರೆ. ರುಕ್ಮಿಣಿ ವಸಂತ್ Rukmini Vasanth ಕನಕವತಿ ಪಾತ್ರದಲ್ಲಿ ನಾಟಕೀಯತೆ ಮತ್ತು ಗ್ಲಾಮರ್ ಎರಡರಲ್ಲೂ ಭರ್ಜರಿಯಾಗಿ ಮಿಂಚಿದ್ದಾರೆ, ಪ್ರೇಕ್ಷಕರನ್ನು ಕಾಡಿದ್ದಾರೆ. ಜಯರಾಮ್ ರಾಜಶೇಖರನಾಗಿ ಕಲಾತ್ಮಕ ಅಭಿನಯ ನೀಡಿದ್ದರೆ, ಗುಲ್ಷನ್ ದೇವಯ್ಯ ಕುಲಶೇಖರನಾಗಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಉಳಿದಂತೆ ಒಂದಷ್ಟು ಹಾಸ್ಯ ಸನ್ನಿವೇಶಗಳು ಚಿತ್ರಕ್ಕೆ ತಾಜಾ ಫೀಲ್ ನೀಡಿದೆ.
ಕತೆಯೇ ಚಿತ್ರದ ಪ್ಲಸ್ ಪಾಯಿಂಟ್ ಆಗಿದ್ದರೆ, ತಾಂತ್ರಿಕತೆಯ ಅಬ್ಬರ ಇನ್ನೊಂದು ಪ್ಲಸ್ ಪಾಯಿಂಟ್. ಅದ್ದೂರಿ ಸೆಟ್ಗಳು—ದೇವಸ್ಥಾನ, ಅರಮನೆ, ದರ್ಬಾರ್, ಕಾಡು ಎಲ್ಲವನ್ನೂ ಮಾಯಾಲೋಕದಂತೆ ತೋರಿಸಲಾಗಿದೆ. VFX ತಂಡ ಹುಲಿ, ಕಾಡಿನ ವಾತಾವರಣ ಮತ್ತು ಮಾಯಾಮಯ ದೃಶ್ಯಗಳನ್ನು ಅಚ್ಚುಕಟ್ಟಾಗಿ ಮೂಡಿಸಿದೆ.ಇನ್ನು ಚಿತ್ರದ ಕ್ಲೈಮ್ಯಾಕ್ಸ್ನ ಹೋರಾಟದ ದೃಶ್ಯ ಪ್ರೇಕ್ಷಕರನ್ನು ನಿಬ್ಬೆರಗಾಗಿಸುತ್ತದೆ. ದೃಶ್ಯದ ಅದ್ದೂರಿತನ, ಕಲಾವಿದರ ನಿಖರ ಅಭಿನಯ ಹಾಗೂ ತಾಂತ್ರಿಕ ಕುಶಲತೆ ಚಿತ್ರವನ್ನು ಗೆಲುವಿನತ್ತ ಸಾಗಿಸಿದೆ.
ಒಂದಷ್ಟು ಹೈಲೈಟ್ಸ್
ಕಾಡಿನಲ್ಲಿರುವ ಬೆರ್ಮೆ ನಾಡಿಗೆ ಬರುತ್ತಾನೆ. ನಾಡಿಗೆ ಬಂದು ವ್ಯಾಪಾರ ಕಲಿಯುತ್ತಾನೆ, ವ್ಯಾಪಾರ ಮಾಡುತ್ತಾನೆ, ಬಂದರು ವಶಕ್ಕೆ ಪಡೆಯುತ್ತಾನೆ. ಅಲ್ಲಿಂದ ಶುರುವಾಗುವುದು ಅಸಲಿ ಕಾಡು-ನಾಡಿನ ಸಂಘರ್ಷ. ಇದರ ಮಧ್ಯೆ ದೈವವನ್ನು ಅವಮಾನಿಸುವ ರಾಜ ಕುಲಶೇಖರ, ಆತನ ದರ್ಪ ಸಿನಿಮಾ ಮುಂದುವರೆಯುವುದಕ್ಕೆ ಮುನ್ನುಡಿ ಹಾಕುತ್ತದೆ. ಕಾಡಿಗೆ ಸೈನ್ಯದೊಂದಿಗೆ ಬರುವ ಕುಲಶೇಖರ ಗೆಲ್ಲುತ್ತಾನಾ? ಬೆರ್ಮೆ ತನ್ನ ಜನರನ್ನು ಕಾಪಾಡುತ್ತಾನಾ? ಕಾಡಿನ-ನಾಡಿನ ಸಂಘರ್ಷದಲ್ಲಿ ಏನಾಗುತ್ತದೆ? ಯಾರು ಮೇಲುಗೈ ಸಾಧಿಸುತ್ತಾರೆ? ಎನ್ನುವುದಕ್ಕೆ ಕಾಂತಾರ ಚಾಪ್ಟರ್ 1 ನೋಡಬೇಕು. ಚಿತ್ರದಲ್ಲಿ ದೈವ ದೇವರುಗಳ ದೃಶ್ಯವೈಭವವಿದೆ. ಸಂಗೀತದಲ್ಲಿ ಅಬ್ಬರವಿದೆ ಆದರೆ ಕಾಂತಾರ ಸಿನಿಮಾದಂತೆ ಇಲ್ಲಿ ಸಂಗೀತ ಪ್ರೇಕ್ಷಕರನ್ನು ಕಾಡಿಲ್ಲ ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಾಗುತ್ತಿದೆ. ಏನೇ ಇರಲಿ ಗುರುವಾರ ಈ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು ಕೆಲವೆ ದಿನಗಳಲ್ಲಿ ಕಾಂತಾರ ಚಾಪ್ಟರ್ 1 ಇಡೀ ಭಾರತೀಯ ಚಿತ್ರರಂಗದ ಪ್ರೇಕ್ಷಕರನ್ನು ಆವರಿಸಿಕೊಳ್ಳೋದಂತೂ ಪಕ್ಕಾ.